SUDDIKSHANA KANNADA NEWS/ DAVANAGERE/ DATE-14-05-2025
ನವದೆಹಲಿ: ಭಾರತ ಮತ್ತು ಪಾಕ್ ನಡುವೆ ಕದನ ವಿರಾಮ ಘೋಷಿಸಲಾಗಿದೆ. ಆದರೂ ಗಡಿಯಲ್ಲಿ ಆತಂಕ ಮುಂದುವರಿದಿದೆ. ಪಹಲ್ಗಾಮ್ ದಾಳಿ ಬಳಿಕ ಉಗ್ರರ ವಿರುದ್ಧದ ಪ್ರತೀಕಾರ ತೀರಿಸಿಕೊಂಡಿರುವ ಭಾರತವು ಮತ್ತೊಂದು ರಾಜತಾಂತ್ರಿಕ ಗೆಲುವು ದಾಖಲಿಸಿದೆ.
ಕಳೆದ 20 ದಿನಗಳ ಹಿಂದೆ ಆಕಸ್ಮಿಕವಾಗಿ ಭಾರತ ಗಡಿ ದಾಟಿ ಪಾಕಿಸ್ತಾನ ಗಡಿಗೆ ಹೋಗಿದ್ದ ಬಿಎಸ್ ಎಫ್ ಯೋಧನನ್ನು ಪಾಕ್ ಸೆರೆ ಹಿಡಿದಿತ್ತು. 182 ನೇ ಬೆಟಾಲಿಯನ್ನ ಬಿಎಸ್ಎಫ್ ಕಾನ್ಸ್ಟೆಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಏಪ್ರಿಲ್ 23 ರಂದು ಪಂಜಾಬ್ನ ಫಿರೋಜ್ಪುರ ಬಳಿ ಅಂತಾರಾಷ್ಟ್ರೀಯ ಗಡಿಯನ್ನು ಅಜಾಗರೂಕತೆಯಿಂದ ದಾಟಿದ ನಂತರ ಪಾಕಿಸ್ತಾನ ರೇಂಜರ್ಸ್ ಬಂಧಿಸಿದ್ದರು.
ಏಪ್ರಿಲ್ 23 ರಿಂದ ಪಾಕಿಸ್ತಾನ ರೇಂಜರ್ಸ್ ವಶದಲ್ಲಿದ್ದ ಬಿಎಸ್ಎಫ್ ಕಾನ್ಸ್ಟೆಬಲ್ ಪೂರ್ಣಮ್ ಕುಮಾರ್ ಶಾ ಅವರನ್ನುಬೆಳಿಗ್ಗೆ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ಪೋಸ್ಟ್ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಹಸ್ತಾಂತರ ನಡೆಯಿತು. ಸ್ಥಾಪಿತ ಶಿಷ್ಟಾಚಾರಗಳನ್ನು ಅನುಸರಿಸಿ ಶಾಂತಿಯುತವಾಗಿ ನಡೆಸಲಾಯಿತು ಎಂದು ಬಿಎಸ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಶಾ ಅವರನ್ನು ಪ್ರಸ್ತುತ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಗಡಿ ಬೇಲಿಯ ಬಳಿ ಮತ್ತು ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಶಾ, ತನ್ನ ಸರ್ವಿಸ್ ರೈಫಲ್ ಅನ್ನು ಹಿಡಿದುಕೊಂಡು ವಿಶ್ರಾಂತಿ ಪಡೆಯಲು ನೆರಳಿನ ಪ್ರದೇಶದ ಕಡೆಗೆ ತೆರಳಿದ್ದರು ಎಂದು ವರದಿಯಾಗಿದೆ. ಈ ಪ್ರಕ್ರಿಯೆಯಲ್ಲಿ, ಅವರು ತಿಳಿಯದೆ ಪಾಕಿಸ್ತಾನಿ ಪ್ರದೇಶವನ್ನು ದಾಟಿದರು, ಅಲ್ಲಿ ಅವರನ್ನು ಪಾಕಿಸ್ತಾನ ರೇಂಜರ್ಗಳು ಬಂಧಿಸಿದ್ದರು. ಭಾರತಕ್ಕೆ ಹಸ್ತಾಂತರಿಸಿದ ಬಳಿಕ ಪಾಕಿಸ್ತಾನದವರು ಏನೆಲ್ಲಾ ಮಾಹಿತಿ ಪಡೆದಿದ್ದಾರೆ ಎಂಬ ಕುರಿತಂತೆ ಪೂರ್ಣಮ್ ಕುಮಾರ್ ಅವರನ್ನು ಬಿಎಸ್ ಎಫ್ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.