SUDDIKSHANA KANNADA NEWS/ DAVANAGERE/ DATE-04-05-2025
ದಾವಣಗೆರೆ :ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಸಮಾಜದ ನಾವೆಲ್ಲರೂ ಒಂದಾಗಿದ್ದೇವೆ. ಮೊದಲು ಪಂಚಪೀಠ ಪೀಠಾಧೀಶರು, ಮಠಾಧೀಶರುಗಳು ಹಾಗೂ ಲಿಂಗಾಯತ ಸ್ವಾಮೀಜಿಗಳೆಲ್ಲರು ಒಂದಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಲಹೆ ನೀಡಿದರು.
ತಮ್ಮ ನಿವಾಸದಲ್ಲಿ ಧಾರ್ಮಿಕ ಹಾಗೂ ರಂಭಾಪುರಿ ಶ್ರೀಗಳ ಇಷ್ಟಲಿಂಗ ಮಹಾ ಪೂಜಾ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ದೇಶದಲ್ಲಿ ಜಾತಿ ಹಾಗೂ ಜನಗಣತಿ ಚರ್ಚೆಯಾಗುತ್ತಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹರಾಷ್ಟ್ರ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಲಿಂಗಾಯತ ಹಾಗೂ ವೀರಶೈವ ಲಿಂಗಾಯತ ಸಮುದಾಯದವರೆಲ್ಲರಿಗೂ ಜಾತಿ ಗಣತಿಯಿಂದ ಗೊಂದಲ ಸೃಷ್ಠಿ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನೀವು ಒಂದಾದರೆ ಸಮಾಜದ ಬಂಧುಗಳೆಲ್ಲರೂ ಒಂದಾಗುವರು ಈ ಮೂಲಕ ಒಮ್ಮತದ ನಿರ್ಧಾರವನ್ನು ಪ್ರಕಟಿಸುವ ವೇದಿಕೆ ಸಿದ್ದವಾಗಬೇಕು ಎಂದು ಸಲಹೆ ನೀಡಿದರು.
ಶೀಘ್ರದಲ್ಲೇ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಮುಂದಾಳತ್ವದಲ್ಲಿ ಪಂಚಪೀಠ ಪೀಠಾಧೀಶರ ಸಭೆಯು ನಡೆಯಲಿದೆ. ಸಭೆಯಲ್ಲಿ ಜನಗಣತಿ ಹಾಗೂ ಜಾತಿಗಣತಿಯಲ್ಲಿ ಯಾವ ರೀತಿಯ ನಿಲುವನ್ನು ಪ್ರಕಟಿಸಬೇಕು ಎಂಬುದನ್ನು ಹಾಗೂ ನಮ್ಮ ಸಮಾಜದ ಒಗ್ಗಟ್ಟು ಪ್ರದರ್ಶನದ ವೇದಿಕೆಯ ನಿರ್ಮಾಣದ ರೂಪುರೇಷೆ ಚರ್ಚೆ ನಡೆಯಲಿದೆ ಎಂದರು.
ಇಷ್ಟಲಿಂಗ ಮಹಾಪೂಜಾ ಕಾರ್ಯಕ್ರಮದಲ್ಲಿ ಎಡೆಯೂರು ಬಾಳೇಹೊನ್ನುರುಮಠ ಕ್ಷೇತ್ರದ ಶ್ರೀ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳು, ಸೂಡಿ ಹಿರೇಮಠದ ಶ್ರೀ ಷ ಬ್ರ. ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಿದ್ದರಬೆಟ್ಟ ರಂಭಾಪುರಿ ಶಾಖಾ ಮಠದ ಶ್ರೀ ಷ.ಬ್ರ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶೀಲಾಮಠದ ಶ್ರೀ ಷ ಬ್ರ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.