SUDDIKSHANA KANNADA NEWS/ DAVANAGERE/ DATE-10-05-2025
ದಾವಣಗೆರೆ : ಯಾವುದೇ ಗುರಿ ಸಾಧನೆಯ ಹಿಂದೆ ಅದರ ಉದ್ದೇಶದಲ್ಲಿ ಅಡಗಿರುತ್ತದೆ. ಅಂತೆಯೇ ಈ ಸಂಸ್ಥೆಯ ಸಾಧನೆ ಬಹಳಷ್ಟಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕ ಮತ್ತು ಭವಿಷ್ಯದ ಬೆಳವಣಿಗೆಯ ಪವಿತ್ರವಾದ ಉದ್ದೇಶ ಸಂಸ್ಥಾಪಕರದ್ದಾಗಿರುವ ಕಾರಣ ಈ ಸಂಸ್ಥೆ ಬೃಹದಾಕಾರವಾಗಿ ಗಟ್ಟಿಯಾಗಿ ಬೆಳೆದು ನಿಂತಿದೆ ಎಂದು ಕನ್ನಡ ಚಿತ್ರರಂಗದ ನಾಯಕ ನಟ ಶರಣ್ ಶ್ಲಾಘಿಸಿದರು.
ಅವರುಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿರವ ಆಂಫಿಥಿಯೇಟರ್ ನಲ್ಲಿ ಸಂಜೆ ಹಮ್ಮಿಕೊಳ್ಳಲಾಗಿದ್ದ ಮಲ್ಲಿಕಾ ಸಾಂಸ್ಕೃತಿಕ ಉತ್ಸವದ ವಿಶೇಷ ಅತಿಥಿಗಳಾಗಿ ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿದರು.
ಬದುಕನ್ನು ಹಸನುಗೊಳಿಸುವ, ಸಮಾಜದ ಮುತ್ತುಗಳನ್ನಾಗಿ ರೂಪಿಸುವ ಇಂತಹ ಒಳ್ಳೆ ಸಂಸ್ಥೆ ಸಿಕ್ಕಿರುವುದು ಇಲ್ಲಿನ ವಿದ್ಯಾರ್ಥಿಗಳೇ ಪುಣ್ಯವಂತರು. ವಿದ್ಯೆ ಕೊಡುವಂತವರೇ ನಿಜವಾದ ನಾಯಕರು ಎಂದು ಜಿಎಂಯು ಕುಲಾಧಿಪತಿಗಳನ್ನು
ಸೇರಿದಂತೆ ಕುಲಪತಿಗಳು, ಉಪ ಕುಲಪತಿಗಳು, ಕುಲಸಚಿವರು ವೇದಿಕೆ ಮೇಲೆ ಆಸೀನರಾಗಿದ್ದ ಜಿಎಂ ಶಿಕ್ಷಣ ಸಂಸ್ಥೆಯ ಅತಿಥಿಗಳ ಕಡೆ ನೋಡುತ್ತಾ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಾ, ಕಾಲೇಜು ಹಂತದಲ್ಲಿ ಸಮಯ ಮತ್ತು ಭವಿಷ್ಯವನ್ನು
ವ್ಯರ್ಥ ಮಾಡಿಕೊಳ್ಳದೇ ಚೆನ್ನಾಗಿ ಎಂಜಾಯ್ ಮಾಡಿದಂತೆ ಚೆನ್ನಾಗಿ ಓದಿ ಎಂದು ಸಲಹೆ ನೀಡಿದರು.
ಕಾಲೇಜಿನ ಆಯ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ದುಬಾರಿ ದಿನದಲ್ಲೂ ಬಂಗಾರವನ್ನು ನೀಡಿ ಪ್ರೋತ್ಸಾಹಿಸುವ ಬಂಗಾರದಂತ ಮನಸ್ಸು ಈ ಸಂಸ್ಥೆಯದ್ದಾಗಿದೆ ಎಂದು ಶ್ರೀಮತಿ ಜಿ.ಎಂ. ಹಾಲಮ್ಮ ಮತ್ತು ಶ್ರೀ ಜಿ. ಮಲ್ಲಿಕಾರ್ಜುನಪ್ಪ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಲ್ಪಡುವ ಕಾಲೇಜು ಮಟ್ಟದಲ್ಲಿ ರ್ಯಾಂಕ್ ಮತ್ತು ಶೇ. 90 ಕಿಂತ ಹೆಚ್ಚು ಅಂಕ ಪಡೆದ ಸಂಸ್ಥೆಯ ಇಂಜಿನಿಯರಿಂಗ್ ಸೇರಿದಂತೆ ಪದವಿ ವಿದ್ಯಾರ್ಥಿಗಳಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯ ಪುರಸ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಧರೊಂದಿಗಿರುವ ಸಂಕಲ್ಪ: ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದ್ದರಿಂದ ಈ ಜನ್ಮದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಾಗಿ ಹುಟ್ಟುವ ಅವಕಾಶ ನಮಗೆ, ನಿಮಗೆಲ್ಲ ಸಿಕ್ಕಿದೆ. ಪ್ರಸ್ತುತ ಭಾರತದಲ್ಲಿ ಯುದ್ಧದ ವಿದ್ಯಾಮಾನ ಎದುರಾಗಿದ್ದು, ಗಡಿಯಲ್ಲಿ ಭಾರತದ ರಕ್ಷಣೆಗೆ ನಿಂತಿರುವ ನಮ್ಮ ಯೋಧರಿಗೆ ನಾವೆಲ್ಲಾ ಭಾರತೀಯರು ಜೊತೆಗಿದ್ದೇವೆ ಎಂಬ ಸಂಕಲ್ಪ ಹೊಂದೋಣ ಎಂದ ಶರಣ್ ಅವರ ಮಾತಿನಂತೆ ನೆರೆದಿದ್ದ ಎಲ್ಲರೂ ಎದ್ದು ನಿಂತು ಚಪ್ಪಾಳೆಗಳ ಮೂಲಕ ಯೋಧರಿಗೆ ಸಲಾಂ ಹೇಳಿ ಜೊತೆಗಿರುವ ಸಂಕೇತವನ್ನು ಸೂಚಿಸಲಾಯಿತು.
ಗೌರವ ಅತಿಥಿಗಳಾಗಿದ್ದ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪಾತಿಗಳಾದ ಜಿ.ಎಂ. ಲಿಂಗರಾಜು ಮಾತನಾಡಿ, ಮಲ್ಲಿಕಾ ಉತ್ಸವವು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಅವರ ವೈವಿಧ್ಯಮಯ ಹಿನ್ನೆಲೆ ಮತ್ತು ಸಂಸ್ಕೃತಿಗಳನ್ನು ಆಚರಿಸಲು ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.