SUDDIKSHANA KANNADA NEWS/ DAVANAGERE/ DATE:28-02-2025
ದಾವಣಗೆರೆ: ರಾಜೀವ್ ಗಾಂಧಿ ವಿವಿ ಮತ್ತು ವಿ.ಟಿ.ಯು ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ 2,78,720-ರೂ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದ ಆರೋಪಿಯನ್ನು ದಾವಣಗೆರೆ ಸಿಇಎನ್ ಪೊಲೀಸ್ ಬಂಧಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಹಲ್ಲೇಹಾಲ್ ಗ್ರಾಮದ ಕೃಷಿ ಕೆಲಸ ಮಾಡಿಕೊಂಡಿದ್ದ ಹೆಚ್.ಟಿ ಸದ್ರುಲ್ಲಾ ಖಾನ್ ಬಂಧಿತ ಆರೋಪಿ.
ಕಳೆದ ಫೆಬ್ರವರಿ 20ರಂದು ಸದ್ರುಲ್ಲಾ ಖಾನ್ ಎಂಬಾತನು ನಾನು ಕರ್ನಾಟಕ ರಾಜ್ಯಪಾಲರ ರಾಜ್ಯಪಾಲರ ಸೆಕ್ರೆಟರಿಯೆಟ್ ಆಗಿ ರಾಜ್ಯಪಾಲರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯುನಿರ್ವಸಿಟಿಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಸದಸ್ವತಗಳ ಹೆಸರನ್ನು ನಾನೇ ನಾಮಿನೇಟ್ ಮಾಡುತ್ತೇನೆಂದು ದಾವಣಗೆರೆ ನಗರದ ವೈದ್ಯರಿಗೆ ಪೋನ್ ಕರೆ ಮಾಡಿದ್ದಾನೆ. ವೈದ್ಯರಿಗೆ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೇಲ್ತ್ ಸೈನ್ಸ್ ಬೆಂಗಳೂರು ಮತ್ತು ವೈದ್ಯರ ಪತ್ನಿಗೆ ವಿ.ಟಿ.ಯು ಬೆಳಗಾವಿಯಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ ಒಟ್ಟು 2,78,720 ರೂಪಾಯಿಗಳನ್ನು ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದ.
ಪಿರ್ಯಾದಿಗೆ ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿದು ಆರೋಪಿಗೆ ಹಣ ವಾಪಸ್ ಕೇಳಲಾಗಿ ಆರೋಪಿ ನಿಮ್ಮ ವಿರುದ್ದ ಸುಳ್ಳು ದೂರನ್ನು ದಾಖಲು ಮಾಡಿ ನಿಮ್ಮ ಕೆ.ಎಂ.ಸಿ ರೆಜಿಸ್ಟರ್ ಅನ್ನು ಬ್ಲಾಕ್ ಮಾಡಿಸುವುದಾಗಿ ಬೆದರಿಸಿದ್ದಾನೆ ಎಂದು ದೂರು ನೀಡಿದ್ದರು.
ಈ ಬಗ್ಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರನ್ನು ಸ್ವೀಕರಿಸಿ ಠಾಣಾ ಗುನ್ನೆ ನಂ. 31/2025 ಕಲಂ 66(ಸಿ) 66(ಡಿ) ಐಟಿ ಆಕ್ಟ್ 2000 & 308(2) 318 (3), 319(2) ಬಿ.ಎನ್.ಎಸ್ ಕಾಯ್ದೆ 2023 ರೀತ್ಯಾ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತೆ.
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕಿ ಪದ್ಮಶ್ರೀ ಗುಂಜೀಕರ್ ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಶಿಲ್ಪ ವೈ, ಸುನೀಲ್ ತೇಲಿ, ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆಯ ರೂಪ ತೆಂಬದ್, ಸಿಬ್ಬಂದಿಗಳಾದ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡವು ಪ್ರಕರಣದ ಆರೋಪಿಯಾದ ಚಿತ್ರದುರ್ಗ ತಾಲೂಕಿನ ಹಲ್ಲೇಹಾಲ್ ಗ್ರಾಮದ ಕೃಷಿ ಕೆಲಸ ಮಾಡಿಕೊಂಡಿದ್ದ ಹೆಚ್.ಟಿ ಸದ್ರುಲ್ಲಾ ಖಾನ್ ಬಂಧಿಸಿ, ಆರೋಪಿಯಿಂದ 40,000 ರೂಪಾಯಿ ಮೌಲ್ಯದ ಕೃತ್ಯಕ್ಕೆ ಬಳಸಿದ್ದ 2 ಮೊಬೈಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ವಂಚನೆಯಾದ ಹಣದಲ್ಲಿ 2,19,058 ರೂಪಾಯಿ ಆರೋಪಿ ಮತ್ತು ಆರೋಪಿ ಪರಿಚಯಸ್ಥರ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಈ ಹಿಂದೆ ಇದೇ ರೀತಿ ಯೂನಿರ್ವಸಿಟಿಗಳಲ್ಲಿ ರಾಜ್ಯಪಾಲರ ನಾಮನಿರ್ದೇಶಿದ ಸದಸತ್ವ ಕೊಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಸರ್ವಜನಿಕರಿಗೆ ವಂಚನೆ ಮಾಡಿದ್ದು ತಿಳಿದು ಬಂದಿದೆ.
ಬೆಂಗಳೂರು ನಗರದ ವಿಧಾನಸೌಧ, ಗೋವಿಂದರಾಜನಗರ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ, ಕೋಲಾರ ಜಿಲ್ಲೆ, ಗೌಣಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪತ್ತೆ ಹಚ್ಚಿ ಬಂಧಿಸಿ ಹಣ ವಶಪಡಿಸಿಕೊಂಡ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.