ಯಾದಗಿರಿ: ಬಾಣಂತಿಯರ ಸರಣಿ ಸಾವು ಪ್ರಕರಣ ರಾಜ್ಯದಾದ್ಯಂತ ತಲ್ಲಣ ಸೃಷ್ಟಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಶಿಶುಗಳ ಸಾವಿನ ಸರದಿ ಶುರುವಾಗಿದೆ.ಯಾದಗಿರಿ ಜಿಲ್ಲೆಯ ತಾಯಿ & ಮಕ್ಕಳ ಆಸ್ಪತ್ರೆಯಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಹೆರಿಗೆ ನೋವಿನಿಂದ 27 ರಂದು ಸುರಪುರ ಪಟ್ಟಣದ ಖಾಸಗಿ ಆಸ್ಪತ್ರೆಗೆ ಗರ್ಭಿಣಿ ದೇವಮ್ಮ ಎಂಬುವವರು ದಾಖಲಾಗಿದ್ದು. ಇವರು ಸುರಪುರ ತಾಲೂಕಿನ ಚಾಕಾಪುರ ಗ್ರಾಮದ ನಿವಾಸಿಯಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದಾಗ ವೈದ್ಯರು, ಮಗು ಆರೋಗ್ಯವಾಗಿದೆ ಎಂದಿದ್ದರು. ಪುನಃ 28 ರಂದು ತಪಾಸಣೆ ಮಾಡಿದಾಗ ಗರ್ಭದಲ್ಲಿ ಮಗು ಮೃತಪಟ್ಟಿರೋದಾಗಿ ಹೇಳಿದ್ದಾರೆ. ಗರ್ಭದಲ್ಲಿ ಮೃತಪಟ್ಟ ಮಗು ತೆಗೆಯಲು 50 ಸಾವಿರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಸಿಜೇರಿಯನ್ ಮಾಡಬೇಕಾಗುತ್ತದೆ ಅದಕ್ಕೆ 50 ಸಾವಿರ ಹಣ ಕಟ್ಟಲೇಬೇಕೆಂದು ಹೇಳಿದ್ದರಂತೆ. ಹಣವಿಲ್ಲದ ಕಾರಣಕ್ಕೆ ಸಂಬಂಧಿಕರು ಗರ್ಭಿಣಿಯನ್ನ ಸುರಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ಸರ್ಕಾರಿ ವೈದ್ಯರು ಅಲ್ಲಿಂದ ಯಾದಗಿರಿ ತಾಯಿ & ಮಕ್ಕಳ ಆಸ್ಪತ್ರೆಗೆ ರವಾನಿಸಿದ್ದರು.
ಗರ್ಭದಲ್ಲಿ ಮಗು ಮೃತಪಟ್ಟ ಒಂದು ದಿನದ ಬಳಿಕ ಮಗು ಹೊರತೆಗೆದಿದ್ದಾರೆ. ಗರ್ಭಿಣಿ ದೇವಮ್ಮ ಎರಡು ದಿನ ಜೀವನ್ಮರಣದ ಹೋರಾಟದಲ್ಲಿ ನರಳಾಡಿದ್ದಾಳೆ.ಇತ್ತೀಚಿನ ಬಾಣಂತಿಯರ ಸರಣಿ ಸಾವುಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರು ಹಿಂದೇಟು ಹಾಕುವಂತೆ ಮಾಡಿದ್ದರೂ ಜನರ ಆರೋಗ್ಯದ ವಿಚಾರವಾಗಿ ಸರಕಾರ ಉಡಾಫೆಯಿಂದ ನಡೆದುಕೊಳ್ಳುತ್ತಿದೆ ಎಂಬುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಉಂಟುಮಾಡಿರುವುದು ಕಂಡು ಬರುತ್ತಿದೆ.
ರಾಜ್ಯದಲ್ಲಿ ವಿವಿಧ ಕಾರಣಗಳಿಗಾಗಿ ಬಾಣಂತಿಯರ ಸಾವು ಹೆ ಚ್ಚುತ್ತಿರುವುದರಿಂದ ಕಳವಳಗೊಂಡಿರುವ ಸರಕಾರದ ಮೇಲಧಿಕಾರಿಗಳು ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಭಾನುವಾರ ಬೆಳಗ್ಗೆ ರಾಜ್ಯದ ಪ್ರಧಾನ ಕಾರ್ಯದರ್ಶಿ (ಪ್ರಿನ್ಸಿಪಲ್ ಸೆಕ್ರೆಟರಿ) ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲೆಯ ವೈದ್ಯಾದಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡು ಯಾವುದೇ ಕಾರಣಕ್ಕೂ ಸಾವು ಆಗದಂತೆ ನೋಡಿಕೊಳ್ಳಬೇಕು ಎಂದು ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ.