SUDDIKSHANA KANNADA NEWS/ DAVANAGERE/ DATE:18-01-2025
ದಾವಣಗೆರೆ: ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಗೋಮಾಳದಲ್ಲಿ 49 ಎಕರೆ ಪ್ರದೇಶಕ್ಕೆ ತಂತಿ ಬೇಲಿ ಅಳವಡಿಸಿರುವುದನ್ನು ವಿರೋಧಿಸಿ ರೈತರೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸಣ್ಣಚಿಕ್ಕಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತ ಎಂದು ಗುರುತಿಸಲಾಗಿದೆ. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ವಿದ್ಯುತ್ ಸರಬರಾಜು ಮಾಡಲು ಪಿಎಂ- ಕುಸುಮ್ ಯೋಜನೆಯಡಿ ಘಟಕ ನಿರ್ಮಾಣ ಮಾಡಲು ಬೇಲಿ ಹಾಕಲಾಗಿದೆ. ಗೋಮಾಳದ ಸರ್ವೆ ನಂಬರ್ 103ರಲ್ಲಿ ಸಣ್ಣಚಿಕ್ಕಪ್ಪ 2 ಎಕರೆ ಭೂಮಿ ಹೊಂದಿದ್ದರು. ಸೋಲಾರ್ ವಿದ್ಯುತ್ ಉತ್ಪಾದನೆಗೆ ಭೂಮಿಯನ್ನು ವಶಪಡಿಸಿಕೊಂಡಿರುವುದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕೂಡಲೇ ಪೊಲೀಸ್ ಹಾಗೂ ಬೆಸ್ಕಾಂ ಸಿಬ್ಬಂದಿ ಕೂಡಲೇ ಆಂಬುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬೆಸ್ಕಾಂ ಅಧಿಕಾರಿಗಳ ದೂರಿನ ಅನ್ವಯ ರೈತ
ಸಣ್ಣಚಿಕ್ಕಪ್ಪ ವಿರುದ್ಧ ಆತ್ಮಹತ್ಯೆಗೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೊನ್ನಾಳಿ ಸಿಪಿಐ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಸಣ್ಣಚಿಕ್ಕಪ್ಪನ ಪತ್ನಿ ಸಾಕಮ್ಮ ಅವರೂ ಸಹ ಸೋಲಾರ್ ಕಂಪೆನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.