SUDDIKSHANA KANNADA NEWS/ DAVANAGERE/ DATE-03-05-2025
ಗೋವಾದ ಶಿರ್ಗಾಂವ್ ದೇವಾಲಯವು ಲೈರೈ ದೇವಿ ಜಾತ್ರೆ, ದೇವತೆ ಲೈರೈ ಮತ್ತು ಆಕೆಯ ಸಹೋದರರ ವಾರ್ಷಿಕ ಮೆರವಣಿಗೆಗಾಗಿ ಭಕ್ತರಿಂದ ತುಂಬಿತ್ತು.
ಕಡಲತೀರ ನಗರವಾದ ಗೋವಾದ ದೇವಾಲಯವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶಿರ್ಗಾಂವ್ ದೇವಾಲಯದಲ್ಲಿ ಭಾರೀ ಜನರು ಸೇರಿದ್ದಾಗ ಈ ದುರಂತ ಸಂಭವಿಸಿದೆ. ಭಕ್ತರು ವಾರ್ಷಿಕ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾಗ ಜನಸಂದಣಿಯಲ್ಲಿ ಭಯಭೀತರಾಗಿ ಓಡಲು ಶುರು ಮಾಡಿದರು. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಸಿಲುಕಿಕೊಂಡ ಜನರು ಆತಂಕಕ್ಕೆ ಒಳಗಾದರು.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪ್ರತಿ ವರ್ಷ ಲೈರೈ ದೇವಿ ಜಾತ್ರೆ ನಡೆಯುತ್ತದೆ. ಈ ವೇಳೆ ಶಿರ್ಗಾಂವ್ ದೇವಾಲಯವು ಭಕ್ತರಿಂದ ತುಂಬಿ ತುಳುಕುತ್ತೆ. ಪಾರ್ವತಿ ದೇವಿಯ ಅವತಾರವೆಂದು ನಂಬಲಾದ ಲೈರೈ, ಗೋವಾದ ಜಾನಪದದ ಏಳು ಸಹೋದರಿ ದೇವತೆಗಳಲ್ಲಿ ಒಂದು. ಈ ಉತ್ಸವವು ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುತ್ತದೆ.
ದೇವಾಲಯದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜೇಬುಗಳ್ಳತನವನ್ನು ತಡೆಗಟ್ಟಲು ಹಲವಾರು ಅಧಿಕಾರಿಗಳು ನಾಗರಿಕ ಉಡುಪಿನಲ್ಲಿದ್ದರು.ಆದ್ರೆ, ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಜನರು ಪ್ರಾಣ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದಾರೆ. ಆಗ ಕಾಲ್ತುಳಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಗೋವಾ ಮೀಸಲು ಪೊಲೀಸ್ ಪಡೆ ಕೂಡ ಸ್ಥಳದಲ್ಲಿತ್ತು. ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು, 300 ಕ್ಕೂ ಹೆಚ್ಚು ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜನಸಂದಣಿಯ ಮೇಲೆ ಕಣ್ಣಿಡಲು ಪೊಲೀಸರು ಡ್ರೋನ್ ಕಣ್ಗಾವಲು ಬಳಸಿದ್ದರು. ವಜ್ರ ವ್ಯಾನ್ ಅಥವಾ ಗಲಭೆ ನಿಯಂತ್ರಣ ವಾಹನವೂ ಸಿದ್ಧವಾಗಿತ್ತು. ಆದ್ರೂ ಕಾಲ್ತುಳಿತ ಸಂಭವಿಸಿ ಏಳು ಮಂದಿ ಉಸಿರು ಚೆಲ್ಲಿದ್ದಾರೆ.