SUDDIKSHANA KANNADA NEWS/ DAVANAGERE/ DATE:21-01-2025
ದಾವಣಗೆರೆ: ಆಟೋದಲ್ಲಿ ಬಿಟ್ಟು ಹೋಗಿದ್ದ 70 ಸಾವಿರ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಪತ್ತೆಯಾಗಿದ್ದು, ಸಂಬಂಧಿಸಿದ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರು ನಗರದ ವಾಸಿ ರೇಷ್ಮಾ ಅವರು ದಾವಣಗೆರೆ ನಗರದ ಜೆ.ಜೆ ಕಾನ್ವೆಂಟ್ ಹತ್ತಿರ ಇರುವ ಸಂಬಂಧಿಕರ ಮನೆಗೆ ಕಾರ್ಯಕ್ರಮದ ಪ್ರಯುಕ್ತ ಸೋಮವಾರದಂದು ಬಂದಿದ್ದರು. ಜೆಜೆ ಕಾನ್ವೆಂಟ್ ನಿಂದ ಆಟೋದಲ್ಲಿ ಹತ್ತಿಕೊಂಡು ವಿನೋಬನಗರ 13 ನೇ ಕ್ರಾಸ್ ನ ಸಂಬಂಧಿಕರ ಮನೆ ಮುಂದೆ ಆಟೋದಲ್ಲಿ ಇಳಿಯುವಾಗ ತಮ್ಮ ಜೊತೆ ಇದ್ದ ಲ್ಯಾಪ್ ಟಾಪ್ ಮತ್ತು ದಾಖಲಾತಿ ಇರುವ ಬ್ಯಾಗ್ ಕಳೆದುಕೊಂಡಿದ್ದರು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ಮಾಲು ಪತ್ತೆ ಮಾಡಲು ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್ ಮತ್ತು ಮಹಮ್ಮದ್ ಆಲ್ತಾಫ್ ನೇತೃತ್ವದಲ್ಲಿ ಸಿಬ್ಬಂದಿಯವರನ್ನು ಒಳಗೊಂಡ ತಂಡವು ಕಳೆದ ಹೋದ ಮಾಲಿನ ಪತ್ತೆಕಾರ್ಯಕ್ಕೆ ಮುಂದಾದರು.
ರೇಷ್ಮಾ ಅವರು ಪ್ರಯಣಿಸಿದ ಆಟೋವನ್ನು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯವರ ಸಹಾಯದಿಂದ ಕೆಎ-17 AA-4961 ನಂಬರಿನ ಆಟೋ ಮತ್ತು ಚಾಲಕ ಮಹಮ್ಮದ್ ಸಾದೀಕ್ 4 ನೇ ಕ್ರಾಸ್ ಬೀಡಿ ಲೇಔಟ್ ದಾವಣಗೆರೆ ಈತನನ್ನು ಪತ್ತೆಮಾಡಿದರು. ರೇಷ್ಮಾ ಅವರು ಕಳೆದುಕೊಂಡಿದ್ದ ಸುಮಾರು 70000 ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಮತ್ತು ಇತರೆ ದಾಖಲಾತಿಗಳು ಪತ್ತೆ ಮಾಡಿದ್ದಾರೆ. ವಾರಸುದಾರರಾದ ರೇಷ್ಮಾ ಅವರಿಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.
ಸ್ವತ್ತಿನ ಪತ್ತೆಕಾರ್ಯದಲ್ಲಿ ಯಶ್ವಸಿಯಾದ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್, ಮಹಮ್ಮದ್ ಆಲ್ತಾಫ್, ಸಿಬ್ಬಂದಿಗಳಾದ ಮಂಜುನಾಥನಾಯ್ಕ, ನರೇಶ್ ಎಪಿ, ಖಾಜಾ ಹುಸೇನ್ ಅತ್ತಾರ್, ದಯಾನಂದ ಎನ್. ಹಾಗೂ ಕಮಾಂಡ್ ಸೆಂಟರ್ ಸಿಬ್ಬಂದಿಯವರನ್ನೊಳಗೊಂಡ ತಂಡಕ್ಕೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.