SUDDIKSHANA KANNADA NEWS/ DAVANAGERE/ DATE:15-02-2025
ದಾವಣಗೆರೆ: ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಎಸ್ಪಿ ಉಮಾ ಪ್ರಶಾಂತ್ ಅವರ ಸೂಚನೆಯಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ್, ಮಂಜುನಾಥ. ನಗರ ಡಿವೈಎಸ್ಪಿ ಶರಣಬಸವೇಶ್ವರ ಭೀಮರಾವ್ ಅವರ ಮಾರ್ಗದರ್ಶನದಲ್ಲಿ ಸಂಜೆ ಸಮಯದಲ್ಲಿ ದಾವಣಗೆರೆ ಟ್ರಾಫಿಕ್ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ದಕ್ಷಿಣ ಸಂಚಾರ ಠಾಣೆ ಪಿಎಸ್ಐ ನಿರ್ಮಲ ಡಿ. ಹೆಚ್. ಹಾಗೂ ಸಿಬ್ಬಂದಿಯಾದ ರವಿನಾಯ್ಕ್ ರವರೊಂದಿಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು.
ಈ ವೇಳೆ ನಗರದ ಡೆಂಟಲ್ ಕಾಲೇಜು ರಸ್ತೆಯಲ್ಲಿ ಹೆಲ್ಮೆಟ್ ಅನ್ನು ಧರಿಸದೇ ಬೈಕ್ ಅನ್ನು ಚಲಾಯಿಸಿ ಕೊಂಡು ಬಂದಿದ್ದನ್ನು ನಿಲ್ಲಿಸಿ ತಪಾಸಣೆ ಮಾಡಲಾಯಿತು. ಬೈಕ್ ಸವಾರನು ಅಪ್ರಾಪ್ತ ವಯಸ್ಸಿನವನು ಎಂದು ತಿಳಿದು ಬಂದಿದ್ದು,
ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ಬೈಕ್ ನೀಡಿದ್ದರ ಬಗ್ಗೆ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಅನ್ನು ಜಫ್ತಿ ಮಾಡಿ ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಳ್ಳಲಾಯಿತು.
3 ನೇ ಎಎಸ್ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕ್ ಮಾಲೀಕ ಸರಸ್ವತಿ ನಗರದ ಪ್ರದೀಪ್ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ನ್ಯಾಯಾಲಯವು ಶನಿವಾರ ಆರೋಪಿತರಾದ ಬೈಕ್ ಮಾಲೀಕರು ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ಅನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ 25,000 ರೂಪಾಯಿ ದಂಡ ವಿಧಿಸಿದೆ.
ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರು, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ. ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮನವಿ ಮಾಡಿದ್ದಾರೆ.






