SUDDIKSHANA KANNADA NEWS/ DAVANAGERE/ DATE:29-10-2024
ದಾವಣಗೆರೆ: ಬ್ಯಾಂಕ್ ಕಿಟಕಿಯ ಸರಳು ಮುರಿದು ಒಳನುಗ್ಗಿ ಕಳ್ಳರು ಬರೋಬ್ಬರಿ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದು, ಇಷ್ಟೊಂದು ಪ್ರಮಾಣದಲ್ಲಿ ಕಳ್ಳತನ ಮಾಡಿರುವುದು ನ್ಯಾಮತಿಯಲ್ಲಿ ಇದೇ ಮೊದಲು ಎಂದು ತಿಳಿದು ಬಂದಿದೆ.
ರೈತರು ಅಡವಿಟ್ಟಿದ್ದ ಚಿನ್ನಾಭರಣ ಕದ್ದಿರುವ ಕಳ್ಳರು ನಗದು ಹಾಗೂ ಚಿನ್ನಾಭರಣ ಇದ್ದ ಇನ್ನೆರಡು ಲಾಕರ್ ಗಳ ಮುರಿಯುವ ಪ್ರಯತ್ನ ಮಾಡಿದ್ದು, ಕಳ್ಳರಿಗೆ ಸಾಧ್ಯವಾಗಿಲ್ಲ. ಆ ಬಳಿಕ ಸಿಕ್ಕ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ನ್ಯಾಮತಿಯ ನೆಹರೂ ರಸ್ತೆಯಲ್ಲಿನ ಎಸ್ ಬಿ ಐ ಶಾಖೆಯ ಕಿಟಕಿಯ ಸರಳುಗಳನ್ನು ಮುರಿದಿರುವ ಕಳ್ಳರು ಲಾಕರ್ ನಲ್ಲಿದ್ದ 12. 95 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬ್ಯಾಂಕ್ ನ ಸಿಬ್ಬಂದಿ ಸೋಮವಾರ ಬೆಳಿಗ್ಗೆ ಬ್ಯಾಂಕ್ ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಬಯಲಾಗಿದೆ. ಅಕ್ಟೋಬರ್ 25 ಇಲ್ಲವೇ 26ರಂದು ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಬ್ಯಾಂಕ್ ಕಟ್ಟಡದ ಬಲಭಾಗದ ಕಿಟಕಿ ಮೂಲಕ ಒಳನುಗ್ಗಿರುವ ಖದೀಮರು ಗ್ಯಾಸ್ ಕಟರ್ ಮೂಲಕ ಭದ್ರತಾ ಕೊಠಡಿಯ ಬಾಗಿಲು ಮುರಿದಿದ್ದು, ಮೂರು ಲಾಕರ್ ಗಳ ಪೈಕಿ ಒಂದು ಲಾಕರ್ ನಲ್ಲಿದ್ದ ಚಿನ್ನಾಭರಣಗಳನ್ನು ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಕದ್ದೊಯ್ದಿದ್ದಾರೆ. ಉಳಿದ ಲಾಕರ್ ಗಳ ಮುರಿಯಲು ಪ್ರಯತ್ನಿಸಿದ್ದರಾದರೂ ಕೈಗೂಡಿಲ್ಲ. ಬ್ಯಾಂಕ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪೊಲೀಸರ ಕೈಗೆ ಸಿಗಬಾರದು ಎಂಬ ಕಾರಣಕ್ಕೆ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ ಎಂದು ನ್ಯಾಮತಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶನಿವಾರ ಮತ್ತು ಭಾನುವಾರ ಬ್ಯಾಂಕ್ ಗೆ ರಜೆ ಇತ್ತು. ಇದನ್ನು ಗಮನಿಸಿದ್ದ ಕಳ್ಳರು ಕನ್ನ ಹಾಕಲು ವಾರಂತ್ಯದ ದಿನಗಳನ್ನು ನಿಗದಿಪಡಿಸಿಕೊಂಡಿದ್ದಾರೆ. ಬ್ಯಾಂಕ್ ಒಳಗೆ ನುಗ್ಗಿದ ತಕ್ಷಣ ಸಿಸಿಟಿವಿಟ, ಸೈರನ್ ಸಂಪರ್ಕ ಕಡಿತಗೊಳಿಸಿರುವ ದುಷ್ಕರ್ಮಿಗಳು ಪೊಲೀಸರಿಗೆ ಸಾಕ್ಷ್ಯ ಸಿಗಬಾರದು ಎಂಬ ಕಾರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಅದರಂತೆ ಕಳ್ಳತನ ಮಾಡಿದ ಮೇಲೆ ಕಾರದ ಪುಡಿ ಅನ್ನು ಕಟ್ಟಡದ ತುಂಬೆಲ್ಲಾ ಹರಡಿ ಹೋಗಿದ್ದಾರೆ. ಶ್ವಾನಗಳಕ್ಕೆ ಸುಳಿವು ಸಿಗಬಾರದು ಎಂಬ ಕಾರಣಕ್ಕೆ ಕಾರದ ಪುಡಿ ಎರಚಲಾಗಿದೆ. ಬೆರಳಚ್ಚು ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಕಸರತ್ತು ಮುಂದುವರಿಸಿದ್ದಾರೆ.
ಸವಳಂಗ ರಸ್ತೆಯ ಸಾಲಬಾಳು ಗ್ರಾಮದವರೆಗೆ ಶ್ವಾನ ದಳ ಹೋಗಿದ್ದು, ಇದೇ ಮಾರ್ಗದಲ್ಲಿ ಕಳ್ಳರು ಎಸ್ಕೇಪ್ ಆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಜನವಸತಿ ಪ್ರದೇಶದಿಂದ ಬ್ಯಾಂಕ್ ದೂರದಲ್ಲಿದೆ. ಹಾಗಾಗಿ, ಬ್ಯಾಂಕ್
ರಜಾ ದಿನಗಳಲ್ಲಿ ಈ ಕೃತ್ಯ ಎಸಗಿದರೆ ಯಾರಿಗೂ ಗೊತ್ತಾಗುವುದಿಲ್ಲ. ಅಕ್ಕಪಕ್ಕದಲ್ಲಿ ಮನೆಗಳು ಇಲ್ಲದ ಕಾರಣ ಈ ಬ್ಯಾಂಕ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸಾಲಬಾಳು ಗ್ರಾಮದಲ್ಲಿನ ಪೆಟ್ರೋಲ್ ಬಂಕ್ ನಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ
ಚಲನವಲನ ಸೆರೆಯಾಗಿರಬಹುದಾ ಎಂಬ ನಿಟ್ಟಿನಲ್ಲಿ ದೃಶ್ಯಾವಳಿಯನ್ನು ನ್ಯಾಮತಿ ಪೊಲೀಸರು ಪರಿಶೀಲಿಸಿದ್ದಾರೆ.
ಪೂರ್ವ ವಲಯದ ಐಜಿಪಿ ಬಿ. ರಮೇಶ್, ಎಸ್ಪಿ ಉಮಾ ಪ್ರಶಾಂತ್, ನ್ಯಾಮತಿ ಪಿಎಸ್ಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.