SUDDIKSHANA KANNADA NEWS/ DAVANAGERE/ DATE:14-01-2025
ದಾವಣಗೆರೆ: ಮನೆಬಿಟ್ಟು ಹೈವೇ ರಸ್ತೆಯಲ್ಲಿ ಹೋಗುತ್ತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ರಕ್ಷಿಸುವ ಮೂಲಕ 112 ಹೊಯ್ಸಳ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಸೋಮವಾರ ರಾತ್ರಿ 7.30ರ ಸುಮಾರಿನಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕೆಎ-11, ಜಿ-0616 ನೇ (ಇ.ಆರ್.ಎಸ್.ಎಸ್.) 112 ಹೊಯ್ಸಳ ವಾಹನದಲ್ಲಿ ಸಿಬ್ಬಂದಿಯವರಾದ ದಾವಣಗೆರೆ ಗ್ರಾಮಾಂತರ ಠಾಣೆಯ ಸಿಬ್ಬಂದಿ ಮಂಜುನಾಥ ನಾಯ್ಕ್ ಹಾಗೂ ಚಾಲಕ ವೀರೇಶ್ ಅವರು ಗಸ್ತು ಕರ್ತವ್ಯದಲ್ಲಿದ್ದರು.
ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಚ್. ಕಲಪನ ಹಳ್ಳಿ ಬಳಿ ಎನ್.ಹೆಚ್-48 ರಸ್ತೆಯಲ್ಲಿ ಯಾರೋ ಒಬ್ಬ ಯುವತಿ ಒಂಟಿಯಾಗಿ ಹೈ ವೇ ರಸ್ತೆಯ ಮದ್ಯದಲ್ಲಿ ವಾಹನಗಳಿಗೆ ಎದುರಾಗಿ ಅಡ್ಡಾದಿಡ್ಡಿಯಾಗಿ ನಡೆದುಕೊಂಡು ಹೋಗುತ್ತಿದ್ದಳು. ತಕ್ಷಣ ಮಹಿಳೆಯನ್ನು ಸ್ಥಳೀಯರ ಸಹಕಾರದಿಂದ ರಕ್ಷಣೆ ಮಾಡಿದ್ದು, ಮಹಿಳೆಯನ್ನು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡದೇ ಇದ್ದು ನಂತರ ಮಹಿಳೆಗೆ ಉಪಚರಿಸಿ ವಿಚಾರಿಸಲಾಗಿ ತನ್ನ ಹೆಸರು ವಿಳಾಸವನ್ನು ತಿಳಿಸಿ ತಾನು ಮನೆಯಲ್ಲಿ ಗಲಾಟೆ ಮಾಡಿಕೊಂಡು ಬೇಸರ ಮಾಡಿಕೊಂಡು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾಳೆ.
ಯುವತಿಯು ರಾಣೆಬೆನ್ನೂರು ತಾಲ್ಲೂಕು ಗುತ್ತಲ ಗ್ರಾಮದವವಳೆಂತ ತಿಳಿಸಿದ್ದಳು. ಯುವತಿಯನ್ನು ಠಾಣೆಗೆ ಕರೆಂದು ಗುತ್ತಲ ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿ ಯುವತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಲು ಪೋಷಕರು ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಯುವತಿಯ ತಂದೆ ತಾಯಿಯವರಿಗೆ ವಿಚಾರಿಸಿದಾಗ ಯುವತಿಯು ಬುದ್ದಿಮಾಂದ್ಯಳು ಎಂದು ತಿಳಿಸಿದ್ದಾರೆ.
ಯುವತಿಯ ಪೋಷಕರ ಕೋರಿಕೆ ಮೇರೆಗೆ ಯುವತಿಯ ಸುರಕ್ಷತೆಯ ದೃಷ್ಟಿಯಿಂದ ಯುವತಿಯನ್ನು ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿರುವ ಮಹಿಳೆ ಮತ್ತು ಬಾಲಕಿಯರ ಮಂದಿರದಲ್ಲಿರಿಸಲಾಗಿದೆ.
ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಕೆಎ-11, ಜಿ-0616 ನೇ (ಇ.ಆರ್.ಎಸ್.ಎಸ್.) 112 ಹೊಯ್ಸಳ ವಾಹನದ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರಾದ ದಾವಣಗೆರೆ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸಿಪಿಸಿ ಮಂಜುನಾಥ ನಾಯ್ಕ ಹಾಗೂ ಚಾಲಕ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಎಪಿಸಿ ವೀರೇಶ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅಭಿನಂದಿಸಿದ್ದಾರೆ.